NEWS DETAILS

Image Description

ಶಿವಮೊಗ್ಗದಲ್ಲಿ ಶನಿವಾರ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಜಿಲ್ಲಾ ಮಹಿಳಾ ಘಟಕವನ್ನು ಮಹಾಸಭಾ ರಾಜ್ಯ ಘಟಕದ ಅಧ್ಯಕ್ಷ ಅಶೋಕ್ ಹಾರನಹಳ್ಳಿ ಉದ್ಘಾಟಿಸಿದರು

ಶಿವಮೊಗ್ಗ : 'ಸಾಮಾಜಿಕ ಪರಿಸರದಲ್ಲಿ ಬ್ರಾಹ್ಮಣರ ಬಗ್ಗೆ ಈ ದ್ವೇಷ, ಅಸಹನೆ ಏಕೆ ಎಂದೇ ಅರ್ಥವಾಗುತ್ತಿಲ್ಲ' ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ್ ಹಾರನಹಳ್ಳಿ ಹೇಳಿದರು.

ನಗರದಲ್ಲಿ ಶನಿವಾರ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಶಿವಮೊಗ್ಗ ಜಿಲ್ಲಾ ಮಹಿಳಾ ಘಟಕ ಉದ್ಘಾಟಿಸಿ ಅವರು ಮಾತನಾಡಿದರು. ಬ್ರಾಹ್ಮಣರ ಬಗ್ಗೆ ಕೆಲವರು ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ. ದ್ವೇಷ ಸಾಧಿಸುತ್ತಿದ್ದಾರೆ. ಅಸಹನೆ ಉಂಟು ಮಾಡುತ್ತಿದ್ದಾರೆ. ಅದು ಏಕೆ ಎಂದೇ ಅರ್ಥವಾಗುತ್ತಿಲ್ಲ. ನಾವು ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳಬಾರದು. ಬೀದಿಯಲ್ಲಿ ನಿಂತು ಹೊಡೆದಾಡುವುದೂ ತರವಲ್ಲ. ಸಾಮರಸ್ಯದ ಮೂಲಕವೇ ವಿರೋಧಿಗಳ ಮನಸ್ಸನ್ನು ಗೆಲ್ಲಬೇಕು ಎಂದು ಕಿವಿಮಾತು ಹೇಳಿದರು.'ನಮಗೆ (ಬ್ರಾಹ್ಮಣರಿಗೆ)ಹಣ ಬಲ ಇಲ್ಲ, ತೋಳ್ಬಲವಿಲ್ಲ, ಜನಬಲವಿಲ್ಲ. ಆದರೆ, ಅದಕ್ಕಾಗಿ ಯೋಚಿಸುವುದೂ ಬೇಡ. ಬೇರೆಯವರಿಂದ ಮಾರ್ಗ ಕಲಿಯುವ ಬದಲು ನಾವೇ ಬೇರೆಯವರಿಗೆ ಮಾರ್ಗದರ್ಶಕರಾಗಬೇಕು. ಆದರ್ಶರಾಗಬೇಕು. ಆದರೆ, ಸಂದಿಗ್ಧ ಪರಿಸ್ಥಿತಿಯಲ್ಲಿ ವಿಪ್ರರು ಒಂದು ರೀತಿಯಲ್ಲಿ ಕಳೆದು ಹೋಗುತ್ತಿದ್ದಾರೆ ಎಂದರು.ನಮ್ಮನ್ನು ಟೀಕಿಸಿದವರೊಂದಿಗೆ ನಾವು ಜಗಳ ಮಾಡಬಾರದು.ಅಕಾಡೆಮಿಕ್ ವಲಯದಲ್ಲಿ ಲೇಖಕಿಮಲ್ಲಿಕಾ ಘಂಟಿ ಅವರು ಬ್ರಾಹ್ಮಣರ ಕುರಿತು ಏನೇನೋ ಮಾತನಾಡಿದ್ದಾರೆ. ಅದಕ್ಕಾಗಿ ನಾವೇಕೆ ತಲೆ ಕೆಡಿಸಿಕೊಳ್ಳಬೇಕು. ಅದು ಅವರ ಮನೋಭಾವನೆಯ ಪ್ರತೀಕವಷ್ಟೇ ಎಂದರು.ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ಪೂಜ್ಯ ಸ್ಥಾನವಿದೆ. ನಾವು ಇಂದು ಗಟ್ಟಿಯಾಗಿ ಇದ್ದೇವೆಂದರೆ ಅದಕ್ಕೆ ನಮ್ಮ ಮನೆಯ ಮಹಿಳೆಯರೇ ಕಾರಣ. ಇಡೀ ಕುಟುಂಬದ ಜವಾಬ್ದಾರಿ, ನಮ್ಮ ಆಗುಹೋಗುಗಳನ್ನು ಅವರೇ ನೋಡಿಕೊಳ್ಳುತ್ತಾರೆ.